×
ಟೌನ್ ಹಾಲ್ ಮುಂದೆ ಜನಪರ ಪ್ರತಿಭಟನೆಗೆ ಅವಕಾಶ ಕೊಡಿಸುವ ದಿಕ್ಕಿನಲ್ಲಿ ಕ್ರಮ: ಮುಖ್ಯಮಂತ್ರಿ ಭರವಸೆ

 

ಬೆಂಗಳೂರು, ನವೆಂಬರ್ 15, 2023:

ಟೌನ್ ಹಾಲ್ ಮುಂದೆ ಜನಪರ ಪ್ರತಿಭಟನೆ, ಹೋರಾಟಗಳಿಗೆ ಅವಕಾಶ ಕೊಡಿಸುವ ದಿಕ್ಕಿನಲ್ಲಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. 

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ, ಕಾರ್ಯಕ್ರಮದಲ್ಲಿ "ಪ್ರಗತಿಪರ ಚಳವಳಿಗಳ ನೈತಿಕ ಶಕ್ತಿ-ಡಾ.ಮರುಳಸಿದ್ದಪ್ಪ" ಅವರ ಗೌರವ ಗ್ರಂಥ ಲೋಕಾರ್ಪಣೆಗೊಳಿಸಿ ಕೆ.ಎಂ.ಎಸ್ ದಂಪತಿಯನ್ನು ಅಭಿನಂದಿಸಿ ಮಾತನಾಡಿದರು. 

ಸರ್ಕಾರವನ್ನು ಎಚ್ಚರಿಸುವ, ನಿಜವಾದ ಜನಪರವಾದ ಚಳವಳಿಗಳು ಸಮಾಜಕ್ಕೆ ಅತ್ಯಗತ್ಯ. ಇಂಥಾ ಪ್ರತಿಭಟನೆ, ಚಳವಳಿಗಳನ್ನು ನಾನು ಬೆಂಬಲಿಸುತ್ತೇನೆ. ಸ್ಬಾಗತಿಸುತ್ತೇನೆ ಎಂದರು. 

ಆದಷ್ಟು ಶೀರ್ಘವಾಗಿ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಿ ಟೌನ್ ಹಾಲ್ ಎದುರು ಮತ್ತೆ ಪ್ರತಿಭಟನೆಗಳಿಗೆ, ಹೋರಾಟಗಳಿಗೆ ಅವಕಾಶ ಆಗುವ ದಿಕ್ಕಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದರು. 

ಅಸಮಾನತೆ ತುಂಬಿರುವ ಜಡ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಈ ಬದಲಾವಣೆ ಜನಪರ ಹೋರಾಟ, ಚಳವಳಿಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಸರ್ಕಾರವನ್ನು ಎಚ್ಚರಿಸುವ, ನಿಜವಾದ ಜನಪರತೆಯಿಂದ ಕೂಡಿದ  ಹೋರಾಟ, ಪ್ರತಿಭಟನೆಗಳು ನಡೆಯಬೇಕು ಎಂದರು.

 

ಸಮಾಜ ಮತ್ತು ಸರ್ಕಾರವನ್ನು ಎಚ್ಚರಿಸುವ ಹೋರಾಟಗಳಿಗೆ ಸ್ವಾಗತಿಸುವುದು ಮಾತ್ರವಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು. 

ಬಸವಣ್ಣನವರ ಕೆಲವು ಆರಾಧಕರು ಬಸವಣ್ಣರ ವೈಚಾರಿಕತೆಯನ್ನು ಆಚರಿಸುವುದಿಲ್ಲ. ಮೌಡ್ಯವಿರೋಧಿ ಬಸವಣ್ಣನವರ ಮೌಲ್ಯಗಳನ್ನು ಆಚರಿಸುವುದಿಲ್ಲ. ಆದರೆ ಕೆ.ಮರುಳಸಿದ್ದಪ್ಪ ಅವರು ನಿಜವಾದ ಶರಣರು. ನುಡಿದಂತೆ, ಬರೆದಂತೆ ಬದುಕುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಬಿಜೆಪಿ ವಿರೋಧಿಸಿ ನಾವು-ದೇವೇಗೌಡರು ಜೆಡಿಎಸ್ ಮಾಡಿದೆವು. ಆಮೇಲೆ ನನ್ನನ್ನು ಉಚ್ಛಾಟಣೆ ಮಾಡಿಬಿಟ್ಟರು. ಆ ಸಂದರ್ಭದಲ್ಲಿ ನಾನು ಕೆ.ಮರುಳ ಸಿದ್ದಪ್ಪ ಅವರನ್ನು ಭೇಟಿಯಾದೆ ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡರು. 

ಡಾ. ಕೆ.ಎಂ.ಎಸ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ , ಅಭಿನಂದನಾ ಗ್ರಂಥದ ಸಂಪಾದಕರಾದ ಎಚ್.ದಂಡಪ್ಪ,  ಶ್ರೀನಿವಾಸ್ ಜಿ.ಕಪ್ಪಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

**********

 

 

×
ABOUT DULT ORGANISATIONAL STRUCTURE PROJECTS